ಹುಣ್ಣಿಮೆಯ ಚಂದಿರನು ಕಳೆಬರದಂದದಿ ಕಡಲಲೆಗಳ ಮೇಲೆ ತೇಲುತಿರಲು
ಅಂತರಾಳದ ದುಃಖ ಉಕ್ಕಿ ಹರಿವ ಹೊನಲು
ಭೋರ್ಗರೆವ ಸಮುದ್ರದಲೆಗಳ ರುದ್ರತಾಂಡವ ತುಳಿತದಲಿ
ಅಲ್ಲೊಮ್ಮೆ ಇಲ್ಲೊಮ್ಮೆ ಮಿಂಚಿ ಮಾಯವಾಗುವ ನಿರಾಸಕ್ತಿಯ ಚುಕ್ಕಿಗಳು
ಕಡಲ ಒಡಲಿಂದಲೆಗಳು ದಡಕೆ ನನ್ನೆಡೆಗೆ ಆದರದಿ ಬರುತಿರಲು
ದುಃಖದಿಂದೊಮ್ಮೆಲೆಗೆ ಕ್ಷಣಿಕ ಮುಗುಳುನಗೆಯು
ಮರುಕ್ಷಣವೇ ಹಿಂದಿರುಗಿದಲೆಗಳು ಜಲರಾಶಿಯೆಡೆ ಮುಖಮಾಡಿ
ಪ್ರಭಾವಳಿಯಂತಿರುವ ಸುಖದ ಮಧ್ಯದಲಿ ಮತ್ತೆ ಮೌನ ದುಗುಡವು
ಒಮ್ಮಿಂದೊಮ್ಮೆಲೆಲ್ಲೆಡೆಯು ಅಜ್ಞಾನದಂದಕಾರವು ಆವರಿಸಲು
ದಾರಿಕಾಣದೆ ನೊಂದು ಬೇಸತ್ತ ಮನವು
ದೂರದಲ್ಲೊಮ್ಮೆ ಗೋಚರಿಸಿದ ಕಿಡಿಯ ಹಿಡಿಯಲು ಹೋಗಿ
ಗಾದೆಮಾತಿನ ಸತ್ಯಾಂಶದರಿವಾಗಿ ಅಲ್ಲೊಮ್ಮೆ ಪುನಃ ಸೋಲು
ಸೋಲು ಗೆಲುವಿನ ಸೋಪಾನ, ಸೋತವನೇ ನಿಜವಾದ ವಿಜೇತ
ಸೋತವನೇ ಬಲ್ಲವನು ಪ್ರಪಂಚದ ವಿಸ್ತೀರ್ಣವನು
ಎಂದು ನಿಟ್ಟುಸಿರು ಬಿಟ್ಟು ದಿಟ್ಟ ಹೆಜ್ಜೆಯನಿಟ್ಟು ಕಳೆಬರವನೊಮ್ಮೆ
ಈಕ್ಷಿಸಲರಿವಾಯಿತದು ಉಡುರಾಜನಲ್ಲ ರವಿತೇಜನೆಂದು
Monday, July 20, 2009
Subscribe to:
Post Comments (Atom)
No comments:
Post a Comment